Posted by Avinash PB on 2023-06-23 13:34:59 | Last Updated by admin on 2023-12-07 03:19:15
Share: Facebook | Twitter | Whatsapp | Linkedin
ಗಾಝಿಯಾಬಾದ: ಆನ್ಲೈನ್ ಗೇಮ್ ನೆಪದಲ್ಲಿ 17 ವರ್ಷದ ಜೈನ ಬಾಲಕನನ್ನು ಮತಾಂತರ ಮಾಡಿಸಿದ್ದಲ್ಲದೆ, ಐದು ಬಾರಿ ಪ್ರಾರ್ಥನೆಯನ್ನೂ ಮಾಡಿಸಿದ ಆರೋಪದ ಮೇಲೆ ಧರ್ಮಗುರು ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆನ್ಲೈನ್ ಆಟಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ತಂತ್ರವನ್ನು ಹೇಳುವ ನೆಪದಲ್ಲಿ ಹುಡುಗನ ಸಂಪರ್ಕಕ್ಕೆ ಬಂದಿದ್ದರೆಂದು ಹೇಳಲಾಗುತ್ತಿದೆ.
ಧರ್ಮಗುರು ಸಂಪರ್ಕಕ್ಕೆ ಬಂದ ನಂತರ ಬಾಲಕನ ಚಟುವಟಿಕೆಗಳಲ್ಲಿ ಬದಲಾವಣೆಗಳು ಕಾಣತೊಡಗಿದವು. ಜಿಮ್ ಗೆ ಹೋಗುತ್ತೇನೆ ಎಂದು ಗಂಟೆಗಟ್ಟಲೆ ನಾಪತ್ತೆಯಾಗುತಿದ್ದ ಬಾಲಕ ನಮಾಜಗೆ ಹೋಗುತ್ತಿದ್ದದ್ದು ಬಯಲಾಗಿದೆ.
ಬಾಲಕನ ತಂದೆಯು ತನ್ನ ಮಗನ ಬದಲಾದ ನಡುವಳಿಕೆ ಕಂಡು ಆತನ ಮೇಲೆ ಒಂದು ಕಣ್ಣಿಡಲು ಪ್ರಾರಂಭಿಸಿದರು. ಬಾಲಕ ಹೊರ ಹೋಗುವಾಗಲ್ಲೆಲ್ಲ ಹಿಂಬಾಲಿಸಿದ ತಂದೆಗೆ, ತನ್ನ ಮಗ ಮಸೀದಿಗೆ ಹೋಗಿ ನಮಾಜ್ ಮಾಡುವುದನ್ನು ಕಂಡು ದಿಗ್ಭ್ರಾಂತಿಯಾಗಿದೆ. ಅಂತಿಮವಾಗಿ, ಸತ್ಯ ಹೊರಬಂದಾಗ, ಹುಡುಗ ತಾನು ಮುಸ್ಲಿಂ ಆಗಿ ಮತಾಂತರಗೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಮತ್ತು ತನ್ನನ್ನು ಮನೆಯಿಂದ ಹೊರ ಹಾಕಿದರೆ ತಾನು ಮಸೀದಿಯಲ್ಲೇ ಇರಲು ಸಿದ್ಧನಿದ್ದೇನೆಂದು ಹೇಳಿಕೆ ಕೊಟ್ಟಿದ್ದಾನೆ.
ಬಾಲಕನ ತಂದೆಯ ಹೇಳಿಕೆಯ ಪ್ರಕಾರ, ಕಳೆದ ಹಲವಾರು ದಿನಗಳಿಂದ ಬಾಲಕನ ನಡುವಳಿಕೆಯಲ್ಲಿ ಬದಲಾವಣೆಗಳು ಕಾಣತೊಡಗಿದ್ದವು. ಆತನ ದೈನಂದಿನ ಚಟುವಟಿಕಗಳು ಬದಲಾಗಿದ್ದವು. ಆತನ ಮೊಬೈಲ್-ಲ್ಯಾಪ್ ಟಾಪ್ ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಹಲವು ಸಾಮಗ್ರಿಗಳು ಪತ್ತೆಯಾಗಿವೆ.
ಈ ಪ್ರಕರಣದಲ್ಲಿ, ಗಾಝಿಯಾಬಾದನ ಸಂಜಯನಗರದ ಸೆಕ್ಟರ್ -23 ರ ಮಸೀದಿಯ ಇಮಾಮ್ ಮತ್ತು ಮುಂಬೈನ ಬಡ್ಡೋ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತದೆ ಎಂದು ಗಾಜಿಯಾಬಾದ್ ಎಸಿಪಿ ಅಭಿಷೇಕ್ ಶ್ರೀವಾಸ್ತವ ಭರವಸೆ ಕೊಟ್ಟಿದ್ದಾರೆ.